ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಅಂತ್ಯದ ಸ್ಥಿತಿಯನ್ನು’ ಮನಸ್ಸಿನಲ್ಲಿಡಿರಿ

‘ಅಂತ್ಯದ ಸ್ಥಿತಿಯನ್ನು’ ಮನಸ್ಸಿನಲ್ಲಿಡಿರಿ

‘ಅಂತ್ಯದ ಸ್ಥಿತಿಯನ್ನು’ ಮನಸ್ಸಿನಲ್ಲಿಡಿರಿ

ಬಾಳಪಯಣದಲ್ಲಿ ನಮಗೆ ಅನೇಕ ಆಯ್ಕೆಗಳನ್ನು ಮಾಡಲಿಕ್ಕಿರುತ್ತದೆ. ಯಾವುದೇ ಮಾರ್ಗವನ್ನು ಆರಿಸಿಕೊಳ್ಳುವ ಮೊದಲು ಅದರ ಅಂತ್ಯಸ್ಥಿತಿ ಹೇಗಿರುವುದೆಂದು ತಿಳಿದುಕೊಳ್ಳಲು ಪ್ರಯತ್ನಿಸುವುದು ವಿವೇಕಯುತ. ತಾವು ಮಾಡಿರುವ ನಿರ್ಣಯಗಳ ಕುರಿತು ಕೆಲವರು ತೀವ್ರವಾಗಿ ವಿಷಾದಿಸಿದ್ದಾರೆ. ‘ಹೀಗಾಗುತ್ತದೆ ಎಂದು ಮೊದಲೇ ಗೊತ್ತಿದ್ದರೆ ಈ ನಿರ್ಣಯವನ್ನು ನಾನು ಎಂದಿಗೂ ಮಾಡುತ್ತಿರಲಿಲ್ಲ’ ಎಂದು ನೀವು ಸಹ ಹೇಳಿರಬಹುದು.

ಪ್ರತಿಯೊಂದು ಮಾರ್ಗವು ಎಲ್ಲಿಗೆ ನಡೆಸುತ್ತದೆ ಎಂಬುದನ್ನು ಅನುಭವಸ್ಥ ಪ್ರಯಾಣಿಕನು ತಿಳಿಯಬಯಸುತ್ತಾನೆ. ಅವನೊಂದು ನಕ್ಷೆಯನ್ನು ಪರೀಕ್ಷಿಸಬಹುದು ಇಲ್ಲವೆ ಆ ಸ್ಥಳದ ಪರಿಚಯವಿದ್ದವರನ್ನು ಕೇಳಬಹುದು. ದಾರಿಯುದ್ದಕ್ಕೂ ಇರುವ ಸೂಚನಾಫಲಕಗಳನ್ನೂ ಅವನು ನೋಡುತ್ತಾನೆ ನಿಸ್ಸಂಶಯ. ಬಾಳಪಯಣದಲ್ಲಾದರೊ ಹೋಗಬೇಕಾದ ಸರಿಯಾದ ಮಾರ್ಗ ಯಾವುದೆಂದು ನೀವು ಹೇಗೆ ಖಾತ್ರಿಮಾಡಿಕೊಳ್ಳಬಲ್ಲಿರಿ? ಪುರಾತನ ಇಸ್ರಾಯೇಲಿನ ಜನರ ಕುರಿತು ದೇವರು ಒಮ್ಮೆ ಮೋಶೆಯ ಮೂಲಕ ಹೇಳಿದ್ದು: “ಅವರಿಗೆ ಜ್ಞಾನವಿದ್ದರೆ ಈ ಸಂಗತಿಗಳನ್ನೆಲ್ಲಾ ಗ್ರಹಿಸುತ್ತಿದ್ದರು; ತಮಗೆ ಅಂತ್ಯದಲ್ಲಿ ದುರವಸ್ಥೆ ಪ್ರಾಪ್ತವಾಗುವದೆಂದು ತಿಳಿದುಕೊಳ್ಳುತ್ತಿದ್ದರು.”—ಧರ್ಮೋಪದೇಶಕಾಂಡ 32:29.

ಅತ್ಯುತ್ತಮ ಸಲಹೆ

ಜೀವಿತದ ಪಯಣದಲ್ಲಿ ನಾವು ಆಯ್ಕೆ ಮಾಡುವ ವಿವಿಧ ಮಾರ್ಗಗಳ ಅಂತ್ಯದ ಸ್ಥಿತಿ ಹೇಗಿರಬಹುದೆಂದು ನಾವು ಸಂದೇಹಪಡುತ್ತಾ ಇರುವ ಅಗತ್ಯವಿಲ್ಲ. ಈ ವಿಷಯದಲ್ಲಿ ಮಾನವರೆಲ್ಲರಿಗೆ ಸರಿಯಾದ ಮಾರ್ಗವನ್ನು ತೋರಿಸಶಕ್ತನು ದೇವರು ಮಾತ್ರ. ಮಾನವರು ಆಯ್ಕೆ ಮಾಡಿದ ಅನೇಕ ಮಾರ್ಗಗಳನ್ನು ಮತ್ತು ಅವುಗಳ ಫಲಿತಾಂಶಗಳನ್ನು ಆತನು ಗಮನಿಸಿದ್ದಾನೆ. ಬೈಬಲ್‌ ಹೇಳುವುದು: “ಮನುಷ್ಯನ ಮಾರ್ಗಗಳು ಯೆಹೋವನಿಗೆ ಕಾಣುತ್ತಲೇ ಇವೆ. ಆತನು ಮನುಷ್ಯನ ನಡತೆಯನ್ನೆಲ್ಲಾ ಪರೀಕ್ಷಿಸುವವನಾಗಿದ್ದಾನೆ.”—ಜ್ಞಾನೋಕ್ತಿ 5:21.

ತನ್ನನ್ನು ಪ್ರೀತಿಸುವವರಿಗೆ ಯೆಹೋವನು ಪರಿಗಣನೆ ತೋರಿಸುತ್ತಾನೆ. ತನ್ನ ವಾಕ್ಯವಾದ ಬೈಬಲ್‌ನ ಮೂಲಕ ಅತ್ಯುತ್ತಮ ಮಾರ್ಗವನ್ನು ಸೂಚಿಸುತ್ತಾನೆ. ನಾವು ಓದುವುದು: “ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆಹೇಳುವೆನು.” ಆದುದರಿಂದ ಯಾವುದೇ ಮಾರ್ಗವನ್ನು ಆರಿಸಿಕೊಳ್ಳುವ ಮೊದಲು ಯೆಹೋವನ ಸಲಹೆಯನ್ನು ಕೋರುವುದು ವಿವೇಕಪ್ರದ. ಪುರಾತನ ಇಸ್ರಾಯೇಲಿನ ರಾಜ ದಾವೀದನು ಅದನ್ನೇ ಮಾಡುತ್ತಾ ಪ್ರಾರ್ಥಿಸಿದ್ದು: “ನಾನು ನಡೆಯತಕ್ಕ ಮಾರ್ಗವನ್ನು ತಿಳಿಸು.”—ಕೀರ್ತನೆ 32:8; 143:8.

ಹೋಗಬೇಕಾದ ಮಾರ್ಗವು ಒಬ್ಬ ಭರವಸಾರ್ಹ ಮತ್ತು ಅನುಭವಸ್ಥ ಪ್ರಯಾಣಿಕನಿಂದ ಸೂಚಿಸಲ್ಪಟ್ಟಲ್ಲಿ ನೀವದನ್ನು ಭರವಸೆಯಿಂದಲೂ ಸುರಕ್ಷಾಭಾವದಿಂದಲೂ ಪಾಲಿಸುತ್ತೀರಿ. ಆ ಮಾರ್ಗ ಎಲ್ಲಿಗೆ ನಡೆಸುತ್ತದೋ ಎಂದು ನೀವು ಚಿಂತಿಸುವುದಿಲ್ಲ. ಯೆಹೋವನ ಮಾರ್ಗದರ್ಶನವನ್ನು ದಾವೀದನು ಕೇಳಿಕೊಂಡನು ಮತ್ತು ಅದನ್ನು ಪಾಲಿಸಿದನು. ಪರಿಣಾಮವಾಗಿ ನೆಮ್ಮದಿಯನ್ನು ಅನುಭವಿಸಿದನು, ಅದು 23ನೇ ಕೀರ್ತನೆಯಲ್ಲಿ ಸುಂದರವಾಗಿ ವರ್ಣಿಸಲ್ಪಟ್ಟಿದೆ. ಅವನು ಬರೆದದ್ದು: “ಯೆಹೋವನು ನನಗೆ ಕುರುಬನು; ಕೊರತೆಪಡೆನು. ಆತನು ಹಸುರುಗಾವಲುಗಳಲ್ಲಿ ನನ್ನನ್ನು ತಂಗಿಸುತ್ತಾನೆ; ವಿಶ್ರಾಂತಿಕರವಾದ ನೀರುಗಳ ಬಳಿಗೆ ಬರಮಾಡುತ್ತಾನೆ. ನನ್ನ ಪ್ರಾಣವನ್ನು ಉಜ್ಜೀವಿಸಮಾಡಿ ತನ್ನ ಹೆಸರಿಗೆ ತಕ್ಕಂತೆ ನೀತಿಮಾರ್ಗದಲ್ಲಿ ನನ್ನನ್ನು ನಡಿಸುತ್ತಾನೆ. ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ ನೀನು ಹತ್ತಿರವಿರುವದರಿಂದ ಕೇಡಿಗೆ ಹೆದರೆನು.”—ಕೀರ್ತನೆ 23:1-4.

ಅವರ ಮುಂದಿನ ಸ್ಥಿತಿ ಏನಾಗಲಿದೆ?

ಆಸಾಫನು ಅಥವಾ ಅವನ ಸಂತತಿಯವರಲ್ಲಿ ಒಬ್ಬನಾದ ಕೀರ್ತನೆಗಾರನು, ತಾನು ಜೀವಿತದ ಪಯಣದಲ್ಲಿ ದೇವರನ್ನು ಸೇವಿಸುವುದರಿಂದ ಬಹುಮಟ್ಟಿಗೆ ದೂರಸರಿದೆನೆಂದು ಒಪ್ಪಿಕೊಳ್ಳುತ್ತಾನೆ. ಅದಕ್ಕೆ ಕಾರಣವೇನಾಗಿತ್ತು? ವಂಚಕರೂ ಕ್ರೂರಿಗಳೂ ಆದ ಜನರು ಸಮೃದ್ಧಿಯಿಂದಿರುವುದನ್ನೂ ‘ದುಷ್ಟರ ಸೌಭಾಗ್ಯವನ್ನೂ’ ನೋಡಿ ಅವನು ಅಸೂಯೆಪಟ್ಟನು. ಅವರು “ಸದಾ ಸುಖದಿಂದಿದ್ದು ಸ್ಥಿತಿವಂತರಾಗಿ” ಇದ್ದಾರೆ ಎಂದು ಅವನಿಗೆ ಅನಿಸಿತು. ಎಷ್ಟೆಂದರೆ ತಾನು ಆರಿಸಿಕೊಂಡಿದ್ದ ನೀತಿಯ ಮಾರ್ಗವು ಸರಿಯಲ್ಲವೇನೋ ಎಂಬ ಸಂದೇಹಕ್ಕೂ ಇದು ಆ ಕೀರ್ತನೆಗಾರನನ್ನು ನಡಿಸಿತ್ತು.—ಕೀರ್ತನೆ 73:2, 3, 6, 12, 13.

ತದನಂತರ ಕೀರ್ತನೆಗಾರನು ಯೆಹೋವನ ಆಲಯಕ್ಕೆ ಹೋಗಿ ದುಷ್ಟರ ಮುಂದಿನ ಸ್ಥಿತಿಯನ್ನು ಕುರಿತು ಪ್ರಾರ್ಥನಾಪೂರ್ವಕವಾಗಿ ಆಲೋಚಿಸಿದನು. ‘ಅವರ ಅಂತ್ಯಾವಸ್ಥೆಯನ್ನು ಆಲೋಚಿಸಲು’ ಬಯಸಿದೆನು ಎಂದನವನು. ಯಾರ ಬಗ್ಗೆ ಅಸೂಯೆಪಟ್ಟನೋ ಅವರ ಮುಂದಿನ ಸ್ಥಿತಿಯ ಕುರಿತು ಅವನು ಧ್ಯಾನಿಸಿದನು. ಹಾಗಾದರೆ ಅವರ ಮುಂದಿನ ಸ್ಥಿತಿ ಹೇಗಿರುವುದು? ಅಂಥ ಜನರು ‘ಅಪಾಯಕರ ಸ್ಥಳದಲ್ಲಿದ್ದಾರೆ’ ಮತ್ತು “ಅವರು ನಿಮಿಷಮಾತ್ರದಲ್ಲಿಯೇ ಹಾಳಾಗಿ ಹೋಗುತ್ತಾರೆ” ಎಂಬುದನ್ನು ಅವನು ಕಂಡುಕೊಂಡನು. ಆದರೆ ಕೀರ್ತನೆಗಾರನು ನಡೆಯುತ್ತಿದ್ದ ಮಾರ್ಗವಾದರೂ ಯಾವುದು? ಅವನು ಯೆಹೋವನಿಗೆ ಹೇಳಿದ್ದು: “ನನ್ನನ್ನು ನಡಿಸಿ ತರುವಾಯ ಮಹಿಮೆಗೆ ಸೇರಿಸಿಕೊಳ್ಳುವಿ.”—ಕೀರ್ತನೆ 73:17-19, 24.

ಸಮೃದ್ಧಿಯನ್ನು ಪಡೆಯಲು ಏನನ್ನಾದರೂ ಅಂದರೆ ಕೆಟ್ಟ ವಿಷಯಗಳನ್ನೂ ಮಾಡಲು ಹೇಸದವರಿಗೆ ಸಿಗುವ ಪ್ರತಿಫಲದ ಕುರಿತು ಆಲೋಚಿಸಿದ್ದರಿಂದ, ತಾನು ನಡೆಯುತ್ತಿರುವ ಮಾರ್ಗವು ಸರಿ ಎಂಬ ನಿಶ್ಚಯ ಕೀರ್ತನೆಗಾರನಿಗಾಯಿತು. ಅವನು ಸಮಾಪ್ತಿಗೊಳಿಸಿದ್ದು: “ನನಗಾದರೋ ದೇವರ ಸಾನ್ನಿಧ್ಯವೇ ಭಾಗ್ಯವು.” ಯೆಹೋವ ದೇವರಿಗೆ ಹತ್ತಿರವಾಗಿರುವುದು ಸದಾ ಬಾಳುವ ಪ್ರಯೋಜನಗಳನ್ನು ತರುತ್ತದೆ.—ಕೀರ್ತನೆ 73:28.

“ಯಾವ ಮಾರ್ಗದಲ್ಲಿ ಸಾಗುತ್ತಿದ್ದೀರೋ ತಿಳಿದುಕೊಳ್ಳಿರಿ”

ನಮ್ಮ ಮುಂದೆಯೂ ಇಂದು ಅಂತಹದ್ದೇ ಆಯ್ಕೆಗಳಿರಬಹುದು. ಯಾರಾದರೂ ತಮ್ಮೊಂದಿಗೆ ಬಿಸ್‌ನೆಸ್‌ ಮಾಡುವಂತೆ ಅಥವಾ ತುಂಬಾ ಹಣಮಾಡುವ ವ್ಯಾಪಾರದಲ್ಲಿ ಬಂಡವಾಳ ಹೂಡುವಂತೆ ನಿಮ್ಮನ್ನು ಕೇಳಬಹುದು, ಕೆಲಸದಲ್ಲಿ ನಿಮಗೆ ಬಡತಿ ಸಿಗಬಹುದು. ಯಾವುದೇ ಹೊಸ ಚಟುವಟಿಕೆಗೆ ಕೈಹಾಕುವಾಗ ಅಪಾಯವು ಇದ್ದೇ ಇರುತ್ತದೆ ಖಂಡಿತ. ಆದರೂ ನಿಮ್ಮ ಆಯ್ಕೆಯ ‘ಅಂತ್ಯದ ಸ್ಥಿತಿಯನ್ನು’ ಪರಿಗಣಿಸುವುದು ಉತ್ತಮವೆಂದು ನಿಮಗೆ ತೋರುವುದಿಲ್ಲವೋ? ಉಂಟಾಗುವ ಕೆಲವು ಫಲಿತಾಂಶಗಳಾವುವು? ನೀವು ಮನೆಯಿಂದ ದೂರ ಉಳಿಯಬೇಕಾಗುತ್ತದೋ? ಇದು ನಿಮ್ಮ ಸಂಗಾತಿ ಅಥವಾ ನಿಮ್ಮ ಮೇಲೆ ಒತ್ತಡವನ್ನು ತರಬಹುದೋ? ಈ ಕೆಲಸದಲ್ಲಿ ತೊಡಗುವುದಾದರೆ, ಸಹವ್ಯಾಪಾರಿಗಳೊಂದಿಗೆ ಹಾಗೂ ಹೋಟೆಲ್‌ಗಳಲ್ಲಿ ಅಥವಾ ಬೇರೆ ಕಡೆಗಳಲ್ಲಿ ಅಹಿತಕರ ಸಹವಾಸ ಮಾಡಬೇಕಾಗುತ್ತದೋ? ಸೊಲೊಮೋನನ ಈ ಸಲಹೆಗೆ ಕಿವಿಗೊಡಿರಿ: “ಯಾವ ಮಾರ್ಗದಲ್ಲಿ ಸಾಗುತ್ತಿದ್ದೀರೋ ತಿಳಿದುಕೊಳ್ಳಿರಿ.”—ಜ್ಞಾನೋಕ್ತಿ 4:26, ಕಂಟೆಂಪರರಿ ಇಂಗ್ಲಿಷ್‌ ವರ್ಷನ್‌.

ಆ ಸಲಹೆಯನ್ನು ನಾವೆಲ್ಲರೂ ವಿಶೇಷವಾಗಿ ಯುವಜನರು ಪರ್ಯಾಲೋಚಿಸುವುದು ಒಳ್ಳೆಯದು. ಕಾಮಪ್ರಚೋದಕ ದೃಶ್ಯಗಳು ಒಳಗೊಂಡಿವೆಯೆಂದು ತಿಳಿದಿದ್ದ ಒಂದು ವಿಡಿಯೋವನ್ನು ಒಬ್ಬ ಯುವಕನು ತಂದನು. ವಿಡಿಯೋ ನೋಡಿದ ನಂತರ ಅವನೆಷ್ಟು ಕಾಮೋದ್ರೇಕಗೊಂಡನೆಂದರೆ ಸಮೀಪದಲ್ಲೇ ಜೀವಿಸುತ್ತಿದ್ದ ವೇಶ್ಯೆಯ ಹತ್ತಿರ ಅವನು ಹೋಗಬೇಕಾಯಿತು. ಇದರಿಂದಾಗಿ ಖಿನ್ನತೆ, ಅಪರಾಧಿ ಮನೋಭಾವದಿಂದ ಬಾಧಿತನಾದನು ಹಾಗೂ ರೋಗ ತಗಲುವುದೋ ಎಂಬ ಭಯ ಅವನನ್ನು ಕಾಡುತ್ತಿತ್ತು. ಇಲ್ಲಿ ಸಂಭವಿಸಿದ ವಿಷಯವನ್ನು ಬೈಬಲ್‌ ಸರಿಯಾಗಿ ವರ್ಣಿಸುತ್ತದೆ: “ಹೋರಿಯು ವಧ್ಯಸ್ಥಾನಕ್ಕೆ ಹೋಗುವ ಹಾಗೂ . . . ಅವನು . . . ತಟ್ಟನೆ ಅವಳ ಹಿಂದೆ ಹೋಗುತ್ತಾನೆ.”—ಜ್ಞಾನೋಕ್ತಿ 7:22, 23.

ಸೂಚನಾಫಲಕಗಳನ್ನು ಅಲಕ್ಷಿಸದಿರಿ

ಸೂಚನಾಫಲಕಗಳನ್ನು ಲಕ್ಷಿಸದಿರುವುದು ಅವಿವೇಕತನವೆಂದು ಹೆಚ್ಚಿನವರು ಒಪ್ಪುತ್ತಾರೆ. ಆದರೆ ದುಃಖಕರವಾಗಿ ಕೆಲವರು ತಮ್ಮ ಬಾಳಪಯಣದಲ್ಲಿ ಅದನ್ನೇ ಮಾಡುತ್ತಿದ್ದಾರೆ, ಅಂದರೆ ಕೊಡಲ್ಪಡುವ ಮಾರ್ಗದರ್ಶನ ಅವರಿಗೆ ಇಷ್ಟವಿಲ್ಲದಿದ್ದರೆ ಅದನ್ನವರು ನಿರ್ಲಕ್ಷಿಸುತ್ತಾರೆ. ಯೆರೆಮೀಯನ ದಿನಗಳಲ್ಲಿನ ಕೆಲವು ಇಸ್ರಾಯೇಲ್ಯರಿಗೆ ಸಂಭವಿಸಿದ ಸಂಗತಿಯನ್ನು ಪರಿಗಣಿಸಿರಿ. ಜನಾಂಗವು ಒಂದು ನಿರ್ಣಯವನ್ನು ಮಾಡಬೇಕಾಗಿತ್ತು. ಆಗ, “ಪುರಾತನ ಮಾರ್ಗಗಳು ಯಾವವು, ಆ ಸನ್ಮಾರ್ಗವು ಎಲ್ಲಿ ಎಂದು ವಿಚಾರಿಸಿ ಅದರಲ್ಲೇ ನಡೆಯಿರಿ” ಎಂದು ಯೆಹೋವ ದೇವರು ಅವರಿಗೆ ಸಲಹೆಯಿತ್ತನು. ಆದರೆ ಜನರು ಮೊಂಡತನದಿಂದ ತಾವು ಆ ಮಾರ್ಗದಲ್ಲಿ “ನಡೆಯುವದೇ ಇಲ್ಲವೆಂದರು.” (ಯೆರೆಮೀಯ 6:16) ಅವರ ದಂಗೆಕೋರ ಮಾರ್ಗದ ‘ಅಂತ್ಯದ ಸ್ಥಿತಿ’ ಏನಾಗಿತ್ತು? ಸಾ.ಶ.ಪೂ. 607ರಲ್ಲಿ ಬಾಬೆಲಿನವರು ಬಂದು ಯೆರೂಸಲೇಮನ್ನು ಸಂಪೂರ್ಣ ನಾಶಗೊಳಿಸಿ ಅದರ ನಿವಾಸಿಗಳನ್ನು ಬಾಬೆಲಿಗೆ ಕೈದಿಗಳಾಗಿ ಕೊಂಡೊಯ್ದರು.

ದೇವರು ಇಟ್ಟಿರುವ ಸೂಚನಾಫಲಕಗಳನ್ನು ಅಲಕ್ಷಿಸುವುದು ನಮಗೆ ಹಿತಕರವಲ್ಲ. ಬೈಬಲ್‌ ನಮ್ಮನ್ನು ಉತ್ತೇಜಿಸುವುದು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.”—ಜ್ಞಾನೋಕ್ತಿ 3:5, 6.

ದೇವರು ಕೊಡುವ ಕೆಲವು ಎಚ್ಚರಿಕೆಗಳು “ಪ್ರವೇಶ ನಿಷೇಧ” ಎಂಬ ಸೂಚನಾಫಲಕಗಳಂತಿವೆ. ಉದಾಹರಣೆಗೆ, ಬೈಬಲ್‌ ಹೇಳುವುದು: “ದುಷ್ಟರ ದಾರಿಯೊಳಗೆ ಪ್ರವೇಶಿಸದಿರು. ಮತ್ತು ಕೆಟ್ಟವರ ಮಾರ್ಗದಲ್ಲಿ ಹೋಗಬೇಡ.” (ಜ್ಞಾನೋಕ್ತಿ 4:14, NIBV.) ಅಂಥ ಹಾನಿಕರವಾದ ಮಾರ್ಗಗಳಲ್ಲಿ ಒಂದನ್ನು ಜ್ಞಾನೋಕ್ತಿ 5:3, 4ರಲ್ಲಿ ವರ್ಣಿಸಲಾಗಿದೆ: “ಜಾರಸ್ತ್ರೀಯ ತುಟಿಗಳಲ್ಲಾದರೋ ಜೇನುಗರೆಯುವದು, ಅವಳ ಮಾತು ಎಣ್ಣೆಗಿಂತಲೂ ನಯವಾಗಿದೆ. ಅವಳು ಕಡೆಯಲ್ಲಿ ವಿಷದಂತೆ ಕಹಿಯೂ ಇಬ್ಬಾಯಿಕತ್ತಿಯಂತೆ ತೀಕ್ಷ್ಣವೂ ಆಗುವಳು.” ಕೆಲವರಿಗೆ ವೇಶ್ಯೆಯೊಂದಿಗೆ ಅಥವಾ ಬೇರೆ ಯಾರೊಂದಿಗೂ ನಡಿಸುವ ಅನೈತಿಕ ಸಂಬಂಧ ಉದ್ರೇಕಕಾರಿ ಅನಿಸಬಹುದು. ಆದರೆ ನೈತಿಕ ನಡತೆಯನ್ನು ನಿಯಂತ್ರಿಸಬೇಕಾದ “ಪ್ರವೇಶ ನಿಷೇಧ” ಫಲಕಗಳನ್ನು ಅಲಕ್ಷಿಸುವುದು ಕೇವಲ ವಿನಾಶಕ್ಕೆ ನಡೆಸಬಲ್ಲದು.

ಅಂಥ ಹಾನಿಕರವಾದ ಮಾರ್ಗಕ್ಕೆ ಅಡಿಯಿಡುವ ಮೊದಲು, ‘ಇದು ನನ್ನನ್ನು ಎಲ್ಲಿಗೆ ನಡಿಸುತ್ತಿದೆ?’ ಎಂದು ನಿಮ್ಮನ್ನೇ ಕೇಳಿಕೊಳ್ಳಿ. ‘ಅಂತ್ಯದ ಸ್ಥಿತಿ’ ಏನಾಗಬಹುದು ಎಂದು ತುಸು ನಿಂತು ಆಲೋಚಿಸಿರಿ. ಅದು ತಾನೇ ನಿಮ್ಮನ್ನು ಗಂಭೀರ ದುಷ್ಪರಿಣಾಮಗಳಿಂದ ದೂರವಿರಿಸುವುದು. ದೇವರ ಎಚ್ಚರಿಕೆಯ ಸೂಚನಾ ಫಲಕಗಳನ್ನು ನಿರ್ಲಕ್ಷಿಸಿದವರ ಬಾಳಪಯಣವು ಏಡ್ಸ್‌, ರತಿರವಾನಿತ ರೋಗಗಳು, ಅನಪೇಕ್ಷಿತ ಗರ್ಭದಾರಣೆಗಳು, ಗರ್ಭಪಾತಗಳು, ಬಿರಿದ ಸಂಬಂಧಗಳು, ಅಪರಾಧಿ ಮನಸ್ಸಾಕ್ಷಿಗಳೇ ಮುಂತಾದ ಹಾನಿಕರ ಪರಿಣಾಮಗಳಿಂದ ತುಂಬಿರುವುದು. ಅನೈತಿಕ ಕೃತ್ಯಗಳನ್ನು ನಡಿಸುವವರ ಅಂತ್ಯ ಸ್ಥಿತಿಯನ್ನು ಪೌಲನು ಸ್ಪಷ್ಟವಾಗಿ ತಿಳಿಸಿದ್ದಾನೆ. ಅವರು “ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.”—1 ಕೊರಿಂಥ 6:9, 10.

“ಇದೇ ಮಾರ್ಗ”

ಕೆಲವೊಮ್ಮೆ ಒಂದು ಮಾರ್ಗವು ನಮ್ಮನ್ನು ಎಲ್ಲಿಗೆ ನಡೆಸುತ್ತದೆ ಎಂಬುದನ್ನು ಕಾಣುವುದು ಕಷ್ಟಕರ. ಆದುದರಿಂದ ದೇವರ ಪ್ರೀತಿಯ ಪರಿಗಣನೆ ಮತ್ತು ಸ್ಪಷ್ಟ ಮಾರ್ಗದರ್ಶನೆಗಾಗಿ ನಾವೆಷ್ಟು ಕೃತಜ್ಞರು! “ಇದೇ ಮಾರ್ಗ, ಇದರಲ್ಲೇ ನಡೆಯಿರಿ” ಎಂದು ಯೆಹೋವನು ಹೇಳಿದ್ದಾನೆ. (ಯೆಶಾಯ 30:21) ಯೆಹೋವನು ನಮಗೆ ತೋರಿಸುವ ಮಾರ್ಗದ ಅಂತ್ಯಸ್ಥಿತಿಯು ಏನಾಗಿದೆ? ಮಾರ್ಗವು ಇಕ್ಕಟ್ಟಾಗಿಯೂ ಕಷ್ಟಕರವಾಗಿಯೂ ಇರುವುದಾದರೂ ಅಂತ್ಯದಲ್ಲಿ ಅದು ನಿತ್ಯಜೀವಕ್ಕೆ ನಡೆಸುತ್ತದೆಂದು ಯೇಸು ಹೇಳಿದನು.—ಮತ್ತಾಯ 7:14.

ನೀವು ಪ್ರಯಾಣಿಸುತ್ತಿರುವ ದಾರಿಯ ಕುರಿತು ತುಸು ಯೋಚಿಸಿರಿ. ಅದು ಸರಿಯಾದ ಮಾರ್ಗವೋ? ಅದು ಎಲ್ಲಿಗೆ ನಡೆಸುತ್ತಿದೆ? ಪ್ರಾರ್ಥನೆಯಲ್ಲಿ ಯೆಹೋವನ ಮಾರ್ಗದರ್ಶನೆಯನ್ನು ಕೋರಿರಿ. ‘ದಾರಿನಕ್ಷೆಯಾದ’ ಬೈಬಲನ್ನು ಪರೀಕ್ಷಿಸಿ ನೋಡಿರಿ. ದೇವರ ಮಾರ್ಗದಲ್ಲಿ ನಡೆಯಲು ಪ್ರಯತ್ನಿಸುತ್ತಿರುವ ಒಬ್ಬ ಅನುಭವಿ ಪ್ರಯಾಣಿಕನನ್ನು ಸಂಪರ್ಕಿಸುವ ಅಗತ್ಯವೂ ನಿಮಗಿರಬಹುದು. ಹೀಗೆ ನಿಮ್ಮ ಮಾರ್ಗವನ್ನು ಬದಲಾಯಿಸುವ ಅಗತ್ಯವನ್ನು ನೀವು ಕಾಣುವಲ್ಲಿ ಅದನ್ನು ತಡವಿಲ್ಲದೆ ಮಾಡಿರಿ.

ತಾನು ಸರಿಯಾದ ಮಾರ್ಗದಲ್ಲಿದ್ದೇನೆ ಎಂಬ ಆಶ್ವಾಸನೆಯನ್ನು ಕೊಡುವ ಸೂಚನಾಫಲಕವನ್ನು ಕಾಣುವಾಗ ಪ್ರಯಾಣಿಕನಿಗೆ ಹೆಚ್ಚು ಉತ್ತೇಜನ ಸಿಗುತ್ತದೆ. ನಿಮ್ಮ ಜೀವಿತಮಾರ್ಗದ ಪರೀಕ್ಷೆಯು ನೀವು ನೀತಿಯ ಮಾರ್ಗದಲ್ಲಿ ನಡೆಯುತ್ತಿದ್ದೀರಿ ಎಂದು ತೋರಿಸುವುದಾದರೆ ಉತ್ಸಾಹದಿಂದ ಅದನ್ನೇ ಮುಂದುವರಿಸಿರಿ. ಪಯಣದ ಅತ್ಯಂತ ಪ್ರತಿಫಲದಾಯಕ ಭಾಗವು ನಿಮ್ಮ ಮುಂದೆಯೇ ಇದೆ.—2 ಪೇತ್ರ 3:13.

ಪ್ರತಿಯೊಂದು ಮಾರ್ಗವು ನಮ್ಮನ್ನು ಒಂದಲ್ಲ ಒಂದು ದಿಕ್ಕಿಗೆ ನಡೆಸುತ್ತದೆ. ನೀವು ಆಯ್ಕೆ ಮಾಡಿದ ಮಾರ್ಗದ ಕೊನೆಯನ್ನು ಮುಟ್ಟುವಾಗ ನಿಮ್ಮ ಅಂತ್ಯಸ್ಥಿತಿ ಹೇಗಿರುವುದು? ‘ಬೇರೊಂದು ಮಾರ್ಗವನ್ನು ಆರಿಸಿದ್ದರೆ ಎಷ್ಟು ಒಳ್ಳೇದಿತ್ತು!’ ಎಂದು ಆಶಿಸುತ್ತಾ ನಿಲ್ಲುವುದರಿಂದ ಏನೂ ಫಲಸಿಗದು. ಆದುದರಿಂದ ನಿಮ್ಮ ಬಾಳಪಯಣದಲ್ಲಿ ಮುಂದಡಿಯನ್ನಿಡುವ ಮುಂಚಿತವಾಗಿ ‘ಅದರ ಅಂತ್ಯಸ್ಥಿತಿ ಏನಾಗಲಿರುವುದು?’ ಎಂದು ನಿಮ್ಮನ್ನೇ ಕೇಳಿಕೊಳ್ಳಿ. (w08 9/1)

[ಪುಟ 10ರಲ್ಲಿರುವ ಚೌಕ/ಚಿತ್ರಗಳು]

‘ಅಂತ್ಯದ ಸ್ಥಿತಿ’ ಏನಾಗಿರುವುದು?

ಜನಪ್ರಿಯವಾಗಿ ತೋರುವ ಕೆಲವು ವಿಷಯಗಳನ್ನು ಮಾಡಿನೋಡುವಂತೆ ಯುವಜನರಿಗೆ ಅನೇಕವೇಳೆ ಶೋಧನೆಗಳು ಮತ್ತು ಒತ್ತಡಗಳು ಬರುತ್ತವೆ. ಕೆಳಗೆ ಕೆಲವು ಸಂಭಾವ್ಯ ಸನ್ನಿವೇಶಗಳನ್ನು ಕೊಡಲಾಗಿದೆ.

‘ಸಿಗರೇಟ್‌ ಸೇದುವಷ್ಟು ಧೈರ್ಯ ನಿನಗಿಲ್ಲ’ ಎಂದು ಯಾರಾದರೂ ನಿಮಗೆ ಸವಾಲೊಡ್ಡುತ್ತಾರೆ.

ಯೂನಿವರ್ಸಿಟಿಯಲ್ಲಿ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುವಂತೆ ನಿಮ್ಮ ಬಗ್ಗೆ ಹಿತಾಸಕ್ತಿಯಿರುವ ಒಬ್ಬ ಶಿಕ್ಷಕನು ನಿಮ್ಮನ್ನು ಒತ್ತಾಯಿಸುತ್ತಾನೆ.

ಮದ್ಯ ಮತ್ತು ಅಮಲೌಷಧಗಳು ಸುಲಭವಾಗಿ ಸಿಗುವಂಥ ಒಂದು ಪಾರ್ಟಿಗೆ ನಿಮ್ಮನ್ನು ಆಮಂತ್ರಿಸಲಾಗಿದೆ.

“ಇಂಟರ್‌ನೆಟ್‌ನಲ್ಲಿ ನಿನ್ನ ಪ್ರೋಫೈಲನ್ನು ಯಾಕೆ ಪ್ರಕಟಿಸುವುದಿಲ್ಲ” ಎಂದು ಕೇಳುತ್ತಾರೆ.

ಹಿಂಸಾಚಾರ ಮತ್ತು ಅನೈತಿಕತೆ ತುಂಬಿರುವ ಒಂದು ಚಲನಚಿತ್ರವನ್ನು ನೋಡಲು ಸ್ನೇಹಿತನು ನಿಮ್ಮನ್ನು ಆಮಂತ್ರಿಸುತ್ತಾನೆ.

ಇಂಥ ಸನ್ನಿವೇಶಗಳು ನಿಮಗೆ ಎಂದಾದರೂ ಎದುರಾಗುವಲ್ಲಿ ನೀವೇನು ಮಾಡುವಿರಿ? ಆ ಶೋಧನೆಗೆ ಸುಲಭವಾಗಿ ಒಳಗಾಗುವಿರೊ ಅಥವಾ ಅದರ ‘ಅಂತ್ಯದ ಸ್ಥಿತಿ’ ಅಂದರೆ ಫಲಿತಾಂಶ ಏನಾಗಬಲ್ಲದು ಎಂದು ಜಾಗ್ರತೆಯಿಂದ ಯೋಚಿಸಿನೋಡುವಿರೊ? “ಮಡಲಲ್ಲಿ ಬೆಂಕಿಯನ್ನಿಟ್ಟುಕೊಂಡರೆ ಬಟ್ಟೆ ಸುಡುವದಿಲ್ಲವೇ? ಧಗಧಗಿಸುನ ಕೆಂಡದ ಮೇಲೆ ನಡೆದರೆ ಕಾಲು ಬೇಯುವದಿಲ್ಲವೋ?” ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳುವುದು ಒಳ್ಳೆಯದು.—ಜ್ಞಾನೋಕ್ತಿ. 6:27, 28.