ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಆತನು ನಿನಗೆ ಸಿಕ್ಕುವನು”

“ಆತನು ನಿನಗೆ ಸಿಕ್ಕುವನು”

ದೇವರ ಸಮೀಪಕ್ಕೆ ಬನ್ನಿರಿ

“ಆತನು ನಿನಗೆ ಸಿಕ್ಕುವನು”

1 ಪೂರ್ವಕಾಲವೃತ್ತಾಂತ 28:9

ನಿಮಗೆ ದೇವರ ಬಗ್ಗೆ ಗೊತ್ತೋ? ಈ ಪ್ರಶ್ನೆಯನ್ನು ಉತ್ತರಿಸುವುದು ಸುಲಭವೆಂದು ತೋರಿದರೂ ಅದೇನು ಅಷ್ಟು ಸುಲಭವಲ್ಲ. ದೇವರ ಬಗ್ಗೆ ನಿಜವಾಗಿ ಗೊತ್ತಿರುವುದರ ಅರ್ಥ ಆತನ ಉದ್ದೇಶ ಮತ್ತು ಮಾರ್ಗಗಳ ಬಗ್ಗೆ ಚೆನ್ನಾಗಿ ತಿಳಿದಿರುವುದೇ. ಹೀಗೆ ತಿಳಿದುಕೊಂಡಾಗ ನಮ್ಮ ಇಡೀ ಜೀವನವನ್ನೇ ಆಳವಾಗಿ ಪ್ರಭಾವಿಸುವಂಥ ಆಪ್ತತೆಯನ್ನು ದೇವರೊಂದಿಗೆ ಬೆಳೆಸಿಕೊಳ್ಳುತ್ತೇವೆ. ಆದರೆ ಅಂಥ ಆಪ್ತತೆ ನಿಜವಾಗಿಯೂ ಸಾಧ್ಯವೋ? ಸಾಧ್ಯವೆಂದಾದರೆ ಹೇಗೆ? ಉತ್ತರಗಳನ್ನು ರಾಜ ದಾವೀದನು ತನ್ನ ಮಗನಾದ ಸೊಲೊಮೋನನಿಗೆ ಕೊಟ್ಟ ಸಲಹೆಯಿಂದ ತಿಳಿದುಕೊಳ್ಳಬಲ್ಲೆವು. ಅದು 1 ಪೂರ್ವಕಾಲವೃತ್ತಾಂತ 28:9ರಲ್ಲಿದೆ.

ಆ ದೃಶ್ಯವನ್ನು ನಿಮ್ಮ ಕಣ್ಮುಂದೆ ತಂದುಕೊಳ್ಳಿ. ದಾವೀದನು ಸುಮಾರು 40 ವರ್ಷಗಳ ವರೆಗೆ ಇಸ್ರಾಯೇಲನ್ನು ಆಳಿದ್ದನು. ಅವನ ಆಳಿಕೆಯ ಕೆಳಗೆ ಆ ಜನಾಂಗ ಸಮೃದ್ಧಿಯನ್ನು ಕಂಡಿತ್ತು. ದಾವೀದನ ನಂತರ ಇನ್ನೇನು ಪಟ್ಟಕ್ಕೆ ಬರಲಿದ್ದ ಸೊಲೊಮೋನ ಎಳೇ ಪ್ರಾಯದವನಾಗಿದ್ದ. (1 ಪೂರ್ವಕಾಲವೃತ್ತಾಂತ 29:1) ಈಗ ದಾವೀದನು ತನ್ನ ಕೊನೆಗಾಲದಲ್ಲಿ ಮಗನಿಗೆ ಯಾವ ಸಲಹೆ ಕೊಡುತ್ತಾನೆ?

ದೇವರ ಸೇವೆಯಲ್ಲಿ ಅಪಾರ ಅನುಭವ ಗಳಿಸಿದ್ದ ದಾವೀದನು ಅದನ್ನು ಆರಂಭಿಸುವುದು ಹೀಗೆ: ‘ನನ್ನ ಮಗನಾದ ಸೊಲೊಮೋನನೇ, ನೀನಂತೂ ನಿನ್ನ ತಂದೆಯ ದೇವರನ್ನು ಅರಿತುಕೊ.’ ದೇವರ ಬಗ್ಗೆ ಬರೀ ತಲೆಜ್ಞಾನಕ್ಕಿಂತ ಹೆಚ್ಚಿನದ್ದು ಬೇಕೆಂಬ ಅರ್ಥದಲ್ಲಿ ದಾವೀದನು ಇದನ್ನು ಹೇಳಿರಬೇಕು. ಏಕೆಂದರೆ ಈ ಮೊದಲೇ ಸೊಲೊಮೋನನು ದಾವೀದನ ದೇವರಾದ ಯೆಹೋವನ ಆರಾಧಕನಾಗಿದ್ದನು ಮತ್ತು ಆ ಕಾಲದಲ್ಲಿ ಹೀಬ್ರು ಶಾಸ್ತ್ರಗ್ರಂಥದ ಮೂರನೇ ಒಂದು ಭಾಗ ಪೂರ್ಣಗೊಂಡಿದ್ದರಿಂದ ಅದರಲ್ಲಿ ದೇವರ ಬಗ್ಗೆ ತಿಳಿಸಲಾಗಿದ್ದ ವಿಷಯಗಳ ಜ್ಞಾನ ಅವನಿಗಿತ್ತು. ಆದರೆ ಒಬ್ಬ ವಿದ್ವಾಂಸನಿಗನುಸಾರ “ಅರಿತು” ಎಂಬದಕ್ಕಿರುವ ಹೀಬ್ರು ಪದಕ್ಕೆ “ಅತ್ಯಾಪ್ತ ಪರಿಚಯ” ಎಂಬರ್ಥವಿದೆ. ಹೌದು ಸ್ವತಃ ದಾವೀದನು ದೇವರೊಂದಿಗಿನ ಅತ್ಯಾಪ್ತ ಸಂಬಂಧವನ್ನು ನೆಚ್ಚಿದ್ದನು. ಆದ್ದರಿಂದ ತನ್ನ ಮಗನೂ ಆ ಸಂಬಂಧವನ್ನು ಬೆಳೆಸಿಕೊಳ್ಳಬೇಕೆಂಬುದು ಅವನ ಆಶಯವಾಗಿತ್ತು.

ದೇವರೊಂದಿಗಿನ ಇಂಥ ಆಪ್ತತೆ ಸೊಲೊಮೋನನ ಜೀವನ ರೀತಿ ಹಾಗೂ ಜೀವನದ ಕಡೆಗಿನ ನೋಟವನ್ನು ಆಳವಾಗಿ ಪ್ರಭಾವಿಸಬೇಕಿತ್ತು. ದಾವೀದನು ತನ್ನ ಮಗನಿಗೆ, “ಸಂಪೂರ್ಣಹೃದಯದಿಂದಲೂ ಮನಸ್ಸಂತೋಷದಿಂದಲೂ ಆತನನ್ನೇ [ದೇವರನ್ನೇ] ಸೇವಿಸು” ಎಂದು ಉತ್ತೇಜನ ನೀಡುತ್ತಾನೆ. ದೇವರನ್ನು ಅರಿತುಕೊಳ್ಳಬೇಕೆಂಬ ಸಲಹೆ ಕೊಟ್ಟ ಬಳಿಕವೇ ಆತನ ಸೇವೆಮಾಡುವ ವಿಷಯವನ್ನು ದಾವೀದನು ಹೇಳಿದ್ದನ್ನು ಗಮನಿಸಿರಿ. ದೇವರನ್ನು ನಿಜವಾಗಿ ಅರಿತುಕೊಳ್ಳುವುದೇ ಆತನ ಸೇವೆಮಾಡುವಂತೆ ಒಬ್ಬನನ್ನು ನಡೆಸುತ್ತದೆ. ಆದರೆ ದೇವರು ಅರೆಮನಸ್ಸಿನ ಅಥವಾ ಕಪಟತನದ ಸೇವೆಯನ್ನು ಇಷ್ಟಪಡುವುದಿಲ್ಲ. (ಕೀರ್ತನೆ 12:2; 119:113) ದೇವರನ್ನು ಹೃತ್ಪೂರ್ವಕವಾಗಿಯೂ ಸಿದ್ಧಮನಸ್ಸಿನಿಂದಲೂ ಸೇವಿಸಬೇಕೆಂದು ದಾವೀದನು ತನ್ನ ಮಗನನ್ನು ಕಳಕಳಿಯಿಂದ ಕೇಳಿಕೊಳ್ಳುತ್ತಾನೆ.

ಒಳ್ಳೇ ಹೇತು ಮತ್ತು ಸದ್ಬುದ್ಧಿಯಿಂದ ದೇವರನ್ನು ಆರಾಧಿಸಬೇಕೆಂದು ದಾವೀದನು ಮಗನಿಗೆ ಹೇಳುವುದೇಕೆ? ಅವನೇ ವಿವರಿಸುವುದು: “ಯೆಹೋವನು ಎಲ್ಲಾ ಹೃದಯಗಳನ್ನು ವಿಚಾರಿಸುವವನೂ ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವನೂ ಆಗಿರುತ್ತಾನಲ್ಲಾ.” ಸೊಲೊಮೋನನು ದೇವರ ಸೇವೆಯನ್ನು ತನ್ನ ತಂದೆಯಾದ ದಾವೀದನನ್ನು ಮೆಚ್ಚಿಸಲಿಕ್ಕಾಗಿ ಮಾಡಬಾರದಿತ್ತು. ಏಕೆಂದರೆ ಯಥಾರ್ಥ ಮನಸ್ಸಿನಿಂದ ತನ್ನ ಸೇವೆಮಾಡುವಂಥ ಜನರಿಗಾಗಿ ದೇವರು ಹುಡುಕುತ್ತಿದ್ದಾನೆ.

ಸೊಲೊಮೋನನು ತನ್ನ ತಂದೆಯನ್ನು ಅನುಸರಿಸಿ ಯೆಹೋವನಿಗೆ ಆಪ್ತನಾಗುವನೋ? ಅದು ಸೊಲೊಮೋನನಿಗೆ ಬಿಟ್ಟ ಆಯ್ಕೆಯಾಗಿತ್ತು. ಆದ್ದರಿಂದಲೇ ದಾವೀದನು ತನ್ನ ಮಗನಿಗೆ “ನೀನು ಆತನನ್ನು [ದೇವರನ್ನು] ಹುಡುಕುವದಾದರೆ ಆತನು ನಿನಗೆ ಸಿಕ್ಕುವನು; ಆತನನ್ನು ಬಿಟ್ಟರೆ ನಿನ್ನನ್ನು ಶಾಶ್ವತವಾಗಿ ತಳ್ಳಿಬಿಡುವನು” ಎಂದು ಹೇಳುತ್ತಾನೆ. ಯೆಹೋವ ದೇವರ ಆಪ್ತ ಆರಾಧಕನಾಗಬೇಕಾದರೆ ಸೊಲೊಮೋನನು ಆತನನ್ನು ಅರಿತುಕೊಳ್ಳಲು ಬಹಳ ಪ್ರಯತ್ನಪಡಬೇಕಿತ್ತು. *

ತಂದೆಯೋಪಾದಿ ದಾವೀದನು ಕೊಟ್ಟ ಸಲಹೆಯು ನಾವು ಯೆಹೋವನಿಗೆ ಆಪ್ತರಾಗಬೇಕೆಂಬುದೇ ದೇವರ ಇಚ್ಛೆ ಎಂಬ ಭರವಸೆ ನೀಡುತ್ತದೆ. ಆದರೆ ಆ ಆಪ್ತತೆಯನ್ನು ಬೆಳೆಸಿಕೊಳ್ಳಲು ನಾವು ‘ಆತನನ್ನು ಹುಡುಕಬೇಕು.’ ಅಂದರೆ ಆತನ ಅತ್ಯಾಪ್ತ ಪರಿಚಯ ಮಾಡಿಕೊಳ್ಳಲು ಬೈಬಲನ್ನು ಪರಿಶೀಲಿಸಬೇಕು. ದೇವರನ್ನು ಚೆನ್ನಾಗಿ ತಿಳಿದುಕೊಳ್ಳುವುದು ಆತನ ಸೇವೆಯನ್ನು ಹೃತ್ಪೂರ್ವಕವಾಗಿಯೂ ಸಿದ್ಧಮನಸ್ಸಿನಿಂದಲೂ ಮಾಡುವಂತೆ ನಮ್ಮನ್ನು ಪ್ರೇರಿಸಬೇಕು. ಇದೇ ರೀತಿ ನಾವಾತನ ಸೇವೆಮಾಡುವಂತೆ ಯೆಹೋವನು ಬಯಸುತ್ತಾನೆ ಮಾತ್ರವಲ್ಲ ಅಂಥ ಸೇವೆಗೆ ಆತನು ಅರ್ಹನೂ ಆಗಿದ್ದಾನೆ.—ಮತ್ತಾಯ 22:37. (w10-E 11/01)

[ಪಾದಟಿಪ್ಪಣಿ]

^ ಪ್ಯಾರ. 9 ದುಃಖದ ವಿಷಯವೇನೆಂದರೆ, ಸೊಲೊಮೋನನು ದೇವರನ್ನು ಸಂಪೂರ್ಣಹೃದಯದಿಂದ ಸೇವಿಸಲು ಆರಂಭಿಸಿದನಾದರೂ ಕೊನೆವರೆಗೂ ನಂಬಿಗಸ್ತನಾಗಿ ಉಳಿಯಲಿಲ್ಲ.—1 ಅರಸುಗಳು 11:4.