ಕೊರಿಂಥದವರಿಗೆ ಬರೆದ ಮೊದಲನೇ ಪತ್ರ 10:1-33

  • ಇಸ್ರಾಯೇಲ್ಯರಿಂದ ಎಚ್ಚರಿಕೆಯ ಪಾಠ (1-13)

  • ಮೂರ್ತಿ ಪೂಜೆ ಬಗ್ಗೆ ಎಚ್ಚರಿಕೆ (14-22)

    • ಯೆಹೋವನ ಮೇಜು, ಕೆಟ್ಟ ದೇವದೂತರ ಮೇಜು (21)

  • ಸ್ವಾತಂತ್ರ್ಯ, ಪರಚಿಂತನೆ (23-33)

    • ‘ಏನೇ ಮಾಡಿದ್ರೂ ದೇವರಿಗೆ ಗೌರವ ತರೋ ಹಾಗೆ ಮಾಡಿ’ (31)

10  ಸಹೋದರರೇ, ನೀವು ಇದನ್ನ ತಿಳ್ಕೊಬೇಕು, ಏನಂದ್ರೆ ನಮ್ಮ ಪೂರ್ವಜರೆಲ್ಲ ಮೋಡದ ಕೆಳಗೆ ನಡೆದ್ರು+ ಮತ್ತು ಕೆಂಪು ಸಮುದ್ರ ದಾಟಿಹೋದ್ರು.+  ಅವ್ರೆಲ್ಲ ಮೋಶೆ ಹಿಂದೆಹಿಂದೆ ಹೋಗ್ತಾ ಮೋಡದ ಕೆಳಗಿದ್ದು ಸಮುದ್ರದ ಒಳಗಿಂದ ಹೋದಾಗ ದೀಕ್ಷಾಸ್ನಾನ ಪಡ್ಕೊಂಡ್ರು.  ಅವ್ರೆಲ್ಲ ದೇವರು ಕೊಟ್ಟ ಒಂದೇ ತರದ ಆಹಾರ ತಿಂದ್ರು,+  ದೇವರು ಕೊಟ್ಟ ಒಂದೇ ತರದ ನೀರು ಕುಡಿದ್ರು.+ ಅವರು ತಮ್ಮ ಜೊತೆನೇ ಬಂದ ಬಂಡೆಯಿಂದ ಹರೀತಿದ್ದ ನೀರು ಕುಡಿತಿದ್ರು. ದೇವರು ಆ ಬಂಡೆಯನ್ನ ಕೊಟ್ಟಿದ್ದನು. ಆ ಬಂಡೆ ಕ್ರಿಸ್ತನನ್ನ ಸೂಚಿಸ್ತಿತ್ತು.*+  ಹಾಗಿದ್ರೂ ದೇವರಿಗೆ ಅವ್ರಲ್ಲಿ ತುಂಬ ಜನ ಇಷ್ಟ ಆಗಲಿಲ್ಲ. ಹಾಗಾಗಿ ಅವರು ಕಾಡಲ್ಲಿ ಸತ್ತುಹೋದ್ರು.+  ಈ ವಿಷ್ಯಗಳಿಂದ ನಾವು ತುಂಬ ಪಾಠ ಕಲಿಬಹುದು. ಅವರು ಕೆಟ್ಟದ್ದನ್ನ ಮಾಡೋಕೆ ಇಷ್ಟಪಟ್ರು, ನಾವು ಅವ್ರ ತರ ಮಾಡಬಾರದು.+  ಅವ್ರಲ್ಲಿ ಸ್ವಲ್ಪ ಜನ ಮಾಡಿದ ಹಾಗೆ ನಾವು ಮೂರ್ತಿಗಳನ್ನ ಆರಾಧಿಸಬಾರದು. ಅವ್ರ ಬಗ್ಗೆ “ಜನ್ರು ಕೂತು ತಿಂದ್ರು, ಕುಡಿದ್ರು. ಆಮೇಲೆ ಎದ್ದು ಮಜಾ ಮಾಡಿದ್ರು” ಅಂತ ಬರೆದಿದೆ.+  ಅವ್ರಲ್ಲಿ ಸ್ವಲ್ಪ ಜನ ಲೈಂಗಿಕ ಅನೈತಿಕತೆ* ಮಾಡಿದ್ರಿಂದ ಒಂದೇ ದಿನದಲ್ಲಿ 23,000 ಜನ ಸತ್ರು. ನಾವು ಅವ್ರ ತರ ಲೈಂಗಿಕ ಅನೈತಿಕತೆ* ಮಾಡೋದು ಬೇಡ.+  ಅವ್ರಲ್ಲಿ ಸ್ವಲ್ಪ ಜನ ಯೆಹೋವನನ್ನ* ಪರೀಕ್ಷಿಸಿದ್ರಿಂದ+ ಹಾವು ಕಚ್ಚಿ ಸತ್ತುಹೋದ್ರು. ನಾವು ಅವ್ರ ತರ ದೇವರನ್ನ ಪರೀಕ್ಷಿಸೋದು ಬೇಡ.+ 10  ಅವ್ರಲ್ಲಿ ಸ್ವಲ್ಪ ಜನ ಗೊಣಗಿ+ ನಾಶಕನ ಕೈಯಿಂದ ಸತ್ರು.+ ನಾವು ಅವ್ರ ತರ ಗೊಣಗೋದು ಬೇಡ. 11  ಅವ್ರಿಗೆ ಏನಾಯ್ತೋ ಅದೆಲ್ಲ ನಮಗೆ ಪಾಠ. ಈ ಕೊನೆ ಕಾಲದಲ್ಲಿ* ಜೀವಿಸ್ತಿರೋ ನಮಗೆ ಎಚ್ಚರಿಕೆ ಕೊಡೋಕೇ ಅಂತಾನೇ ಇದನ್ನೆಲ್ಲ ದೇವರು ಬರೆಸಿದ್ದಾನೆ.+ 12  ಹಾಗಾಗಿ ನಿಂತಿದ್ದೀನಿ ಅಂತ ನೆನಸುವವನು ಬೀಳದ ಹಾಗೆ ಹುಷಾರಾಗಿ ಇರಲಿ.+ 13  ಎಲ್ಲ ಜನ್ರಿಗೆ ಕಷ್ಟಗಳು* ಬರೋ ಹಾಗೇ ನಿಮಗೂ ಕಷ್ಟ ಬಂದಿದೆ.+ ಆದ್ರೆ ದೇವರು ನಂಬಿಗಸ್ತನು, ನಿಮಗೆ ಸಹಿಸ್ಕೊಳ್ಳೋಕೆ ಆಗದೇ ಇರುವಷ್ಟರ ಮಟ್ಟಿಗೆ ಕಷ್ಟ ಬರೋಕೆ ಆತನು ಬಿಡಲ್ಲ.+ ಕಷ್ಟ ಬಂದಾಗ ಅದನ್ನ ನೀವು ಸಹಿಸ್ಕೊಳ್ಳೋಕೆ ಬೇಕಾದ ಸಹಾಯವನ್ನೂ ಆತನು ಕೊಡ್ತಾನೆ.+ 14  ಹಾಗಾಗಿ ನನ್ನ ಪ್ರಿಯರೇ, ಮೂರ್ತಿಪೂಜೆ ಬಿಟ್ಟು ದೂರ ಓಡಿಹೋಗಿ.+ 15  ವಿವೇಚನೆ ಇರುವವ್ರ ಜೊತೆ ಮಾತಾಡೋ ತರ ಮಾತಾಡ್ತಾ ಇದ್ದೀನಿ. ನಾನು ಹೇಳೋದು ನಿಜನಾ ಸುಳ್ಳಾ ಅಂತ ನೀವೇ ತೀರ್ಮಾನ ಮಾಡಿ. 16  ನಾವು ದೇವರಿಗೆ ಧನ್ಯವಾದ ಹೇಳಿ ಪ್ರಾರ್ಥಿಸಿ ಆ ಧನ್ಯವಾದದ ಬಟ್ಟಲಿಂದ ಕುಡಿವಾಗ ಕ್ರಿಸ್ತನ ರಕ್ತದಲ್ಲಿ ಪಾಲು ತಗೊಳ್ತೀವಲ್ಲಾ.+ ನಾವು ರೊಟ್ಟಿ ಮುರಿದು ತಿನ್ನುವಾಗ ಕ್ರಿಸ್ತನ ದೇಹದಲ್ಲಿ ಪಾಲು ತಗೊಳ್ತೀವಲ್ಲಾ.+ 17  ಒಂದೇ ರೊಟ್ಟಿ ಇರೋದ್ರಿಂದ ನಾವು ತುಂಬ ಜನ ಇದ್ರೂ ಒಂದೇ ದೇಹ ಆಗಿದ್ದೀವಿ.+ ಯಾಕಂದ್ರೆ ನಾವೆಲ್ಲ ಆ ಒಂದೇ ರೊಟ್ಟಿಯಲ್ಲಿ ಪಾಲು ತಗೊಳ್ತೀವಿ. 18  ಇಸ್ರಾಯೇಲ್ಯರ ಬಗ್ಗೆ ಯೋಚಿಸಿ. ಅವರು ಯಜ್ಞವೇದಿ ಮೇಲೆ ಅರ್ಪಿಸಿದ್ದನ್ನ ತಿನ್ನುವಾಗ ದೇವರ ಜೊತೆನೇ ತಿಂದ ಹಾಗೆ ಆಗ್ತಿತ್ತಲ್ವಾ?+ 19  ನಾನು ಏನು ಹೇಳ್ತಾ ಇದ್ದೀನಂದ್ರೆ, ಮೂರ್ತಿಗಳಿಗೆ ಕೊಡೋದು ಮಾಂಸ ಅಲ್ವಾ? ಅದ್ರಲ್ಲೇನಿದೆ? ಆ ಮೂರ್ತಿಗಳೇನು ನಿಜವಾಗ್ಲೂ ದೇವ್ರಾ? 20  ಅಲ್ಲ. ಆದ್ರೆ ಬೇರೆ ಜನಾಂಗಗಳ ಜನ ಬಲಿ ಕೊಡುವಾಗ ನಿಜವಾಗ್ಲೂ ಅವರು ದೇವರಿಗಲ್ಲ, ಕೆಟ್ಟ ದೇವದೂತರಿಗೆ ಅರ್ಪಿಸ್ತಾರೆ+ ಅಂತ ನಾನು ಹೇಳ್ತೀನಿ. ನೀವು ಅವ್ರ ಜೊತೆ ಪಾಲು ತಗೊಬಾರದು ಅಂತ ನಾನು ಬೇಡ್ಕೊಳ್ತೀನಿ.+ 21  ನೀವು ಈಕಡೆ ಯೆಹೋವನ* ಬಟ್ಟಲಿಂದ ಕುಡೀತಾ ಕೆಟ್ಟ ದೇವದೂತರ ಬಟ್ಟಲಿಂದಾನೂ ಕುಡಿಯೋಕೆ ಆಗಲ್ಲ. “ಯೆಹೋವನ* ಮೇಜಲ್ಲಿ”+ ತಿಂತಾ ಕೆಟ್ಟ ದೇವದೂತರ ಮೇಜಲ್ಲೂ ತಿನ್ನಕ್ಕಾಗಲ್ಲ. 22  ಹಾಗಾದ್ರೆ ‘ನಾವು ಯೆಹೋವನ* ಕೋಪ ಕೆರಳಿಸ್ತಾ ಇದ್ದೀವಾ?’+ ಹಾಗೆ ಮಾಡೋಕೆ ನಾವೇನು ಆತನಿಗಿಂತ ಬಲಿಷ್ಠರಾ? 23  ಎಲ್ಲ ವಿಷ್ಯಗಳನ್ನ ಮಾಡೋಕೆ ಅನುಮತಿ ಇದೆ, ಆದ್ರೆ ಆ ಎಲ್ಲ ವಿಷ್ಯಗಳೂ ಪ್ರಯೋಜನ ತರಲ್ಲ. ಎಲ್ಲ ವಿಷ್ಯಗಳನ್ನ ಮಾಡೋಕೆ ಅನುಮತಿ ಇದೆ, ಆದ್ರೆ ಆ ಎಲ್ಲ ವಿಷ್ಯಗಳು ಪ್ರೋತ್ಸಾಹ ಕೊಡಲ್ಲ.+ 24  ಪ್ರತಿಯೊಬ್ಬನು ಯಾವಾಗ್ಲೂ ಬರೀ ತನಗೆ ಪ್ರಯೋಜನ ಆಗುತ್ತಾ ಅಂತ ಅಲ್ಲ, ಬೇರೆಯವ್ರಿಗೂ ಪ್ರಯೋಜನ ಆಗುತ್ತಾ ಅಂತ ಯೋಚಿಸಲಿ.+ 25  ನಿಮ್ಮ ಮನಸ್ಸಾಕ್ಷಿ ಚುಚ್ಚದೇ ಇರೋಕೆ ಮಾರುಕಟ್ಟೆಯಲ್ಲಿ ಮಾರೋ ಎಲ್ಲ ಮಾಂಸವನ್ನ ಏನೂ ವಿಚಾರಿಸ್ದೆ ತಿನ್ನಿ. 26  ಯಾಕಂದ್ರೆ “ಭೂಮಿ ಮತ್ತು ಅದ್ರಲ್ಲಿ ಇರೋದೆಲ್ಲ ಯೆಹೋವನಿಗೆ* ಸೇರಿದ್ದು.”+ 27  ಕ್ರೈಸ್ತನಲ್ಲದ ಒಬ್ಬ ವ್ಯಕ್ತಿ ನಿಮ್ಮನ್ನ ಊಟಕ್ಕೆ ಕರೆದಾಗ ನಿಮಗೆ ಹೋಗಬೇಕು ಅಂತ ಅನಿಸಿದ್ರೆ, ನಿಮಗೆ ತಿನ್ನೋಕೆ ಕೊಟ್ಟಿದ್ದನ್ನೆಲ್ಲ ಏನೂ ವಿಚಾರಿಸ್ದೆ ತಿನ್ನಿ. ಆಗ ನಿಮ್ಮ ಮನಸ್ಸಾಕ್ಷಿ ಚುಚ್ಚಲ್ಲ. 28  ಆದ್ರೆ ಯಾರಾದ್ರೂ ನಿಮಗೆ “ಇದು ಬಲಿಯಾಗಿ ಕೊಟ್ಟಿದ್ದು” ಅಂತ ಹೇಳಿದ್ರೆ ಅದನ್ನ ತಿನ್ನಬೇಡಿ. ಆಗ ಅದನ್ನ ಹೇಳಿದವನನ್ನ ನೀವು ಎಡವಿಸಲ್ಲ ಮತ್ತು ಯಾರ ಮನಸ್ಸಾಕ್ಷಿಗೂ ನೋವು ಮಾಡಲ್ಲ.+ 29  ನಾನು ನಿಮ್ಮ ಮನಸ್ಸಾಕ್ಷಿ ಬಗ್ಗೆ ಅಲ್ಲ, ಬೇರೆಯವ್ರ ಮನಸ್ಸಾಕ್ಷಿ ಬಗ್ಗೆ ಹೇಳ್ತಿದ್ದೀನಿ. ನಾನೊಂದು ವಿಷ್ಯ ಮಾಡೋಕೆ ತೀರ್ಮಾನ ಮಾಡಿದ್ರೂ ಇನ್ನೊಬ್ಬ ವ್ಯಕ್ತಿಯ ಮನಸ್ಸಾಕ್ಷಿಗೆ ನಾನು ಮಾಡ್ತಿರೋದು ತಪ್ಪು ಅನ್ಸಿದ್ರೆ ನಾನು ಆ ವಿಷ್ಯ ಮಾಡಲ್ಲ.+ 30  ನಾನು ದೇವರಿಗೆ ಧನ್ಯವಾದ ಹೇಳಿ ಆಹಾರ ತಿಂದ್ರೂ ಅದ್ರಿಂದ ಬೇರೆಯವ್ರಿಗೆ ನಾನು ತಪ್ಪು ಮಾಡ್ತಾ ಇದ್ದೀನಿ ಅನ್ಸಿದ್ರೆ ನಾನು ಅಂಥದ್ದನ್ನ ಯಾಕೆ ತಿನ್ನಬೇಕು?+ 31  ಹಾಗಾಗಿ ನೀವು ತಿಂದ್ರೂ ಕುಡಿದ್ರೂ ಬೇರೇನೇ ಮಾಡಿದ್ರೂ ಅದನ್ನೆಲ್ಲ ದೇವರಿಗೆ ಗೌರವ ತರೋ ಹಾಗೆ ಮಾಡಿ.+ 32  ನೀವು ಯೆಹೂದ್ಯರನ್ನ, ಗ್ರೀಕರನ್ನ ಅಥವಾ ದೇವರ ಸಭೆಯನ್ನ ಎಡವಿಸದ ಹಾಗೆ ಹುಷಾರಾಗಿರಿ.+ 33  ನಾನೂ ಎಲ್ಲ ವಿಷ್ಯಗಳಲ್ಲಿ ಎಲ್ಲ ಜನ್ರನ್ನ ಮೆಚ್ಚಿಸೋಕೆ ಪ್ರಯತ್ನ ಮಾಡ್ತಿದ್ದೀನಿ. ನಾನು ನನ್ನ ಪ್ರಯೋಜನದ ಬಗ್ಗೆ ಯೋಚಿಸ್ತಿಲ್ಲ,+ ತುಂಬ ಜನ ರಕ್ಷಣೆ ಪಡೀಬೇಕಂತ ಅವ್ರ ಪ್ರಯೋಜನದ ಬಗ್ಗೆನೂ ಯೋಚಿಸ್ತಿದ್ದೀನಿ.+

ಪಾದಟಿಪ್ಪಣಿ

ಅಥವಾ “ಕ್ರಿಸ್ತನಾಗಿದ್ದನು.”
ಅಥವಾ “ಲೋಕ ವ್ಯವಸ್ಥೆಯಲ್ಲಿ.”
ಅಥವಾ “ಪ್ರಲೋಭನೆಗಳು.”