ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

2012ರಲ್ಲಿ ಭೂಮಿ ನಾಶವಾಗುವುದೇ?

2012ರಲ್ಲಿ ಭೂಮಿ ನಾಶವಾಗುವುದೇ?

ನಮ್ಮ ಓದುಗರ ಪ್ರಶ್ನೆ

2012ರಲ್ಲಿ ಭೂಮಿ ನಾಶವಾಗುವುದೇ?

▪ “ಮಹಾ ಉತ್ಪಾತದ ಭೀತಿಯಿಂದ ಫ್ರಾನ್ಸ್‌ನ ಹಳ್ಳಿಯೊಂದಕ್ಕೆ ಜನಪ್ರವಾಹ ನುಗ್ಗಿತು . . . ಡಿಸೆಂಬರ್‌ 21, 2012ರಂದು ಜಗತ್ತು ನಾಶವಾಗಲಿದೆ ಎಂಬುದು ಇವರ ನಂಬಿಕೆ. ಆ ದಿನದಂದು 5,125 ವರ್ಷಗಳ ದೀರ್ಘ ಗಣನೆಯ ಮಾಯಾ ಕ್ಯಾಲೆಂಡರ್‌ ಅಂತ್ಯವಾಗಲಿದೆ” ಎಂದು ಬಿಬಿಸಿ ನ್ಯೂಸ್‌ ವರದಿಸಿತು.

ವಿಜ್ಞಾನಿಗಳೆಂದು ಹೇಳಿಕೊಳ್ಳುವವರು, ಧರ್ಮಗುರುಗಳು ಹಾಗೂ 21ನೇ ಶತಮಾನದ ಭವಿಷ್ಯಸೂಚಕರು ಜಗತ್ತು ಸರ್ವನಾಶವಾಗಲಿದೆ ಎಂದು ಎಷ್ಟೋ ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ, ದಿನ ನಿಗದಿಪಡಿಸುತ್ತಲೇ ಬಂದಿದ್ದಾರೆ. ಆದರೆ ಇದುವರೆಗೆ ಭೂಮಿಗೆ ಏನೂ ಆಗಿಲ್ಲ. 2012ರಲ್ಲೂ ಏನೂ ಆಗುವುದಿಲ್ಲ. ನಿಜ ಸಂಗತಿ ಏನೆಂದರೆ ಭೂಮಿ ಇದ್ದ ಹಾಗೇ ಇರುತ್ತದೆ. 2012ರಲ್ಲಿ ಮಾತ್ರವಲ್ಲ ಎಷ್ಟೇ ವರ್ಷಗಳು ಉರುಳಲಿ ಭೂಗ್ರಹಕ್ಕೆ ಯಾವ ಆಪತ್ತೂ ಸಂಭವಿಸುವುದಿಲ್ಲ.

ಬೈಬಲ್‌ ನಮಗೆ ಈ ಭರವಸೆ ನೀಡುತ್ತದೆ: “ಒಂದು [ಸಂತತಿ] ಗತಿಸುವದು, ಇನ್ನೊಂದು [ಸಂತತಿ] ಬರುವದು. ಭೂಮಿಯಾದರೋ ಶಾಶ್ವತವಾಗಿ ನಿಲ್ಲುವದು.” (ಪ್ರಸಂಗಿ 1:4) ಹಾಗೇ ಯೆಶಾಯ 45:18 ಹೇಳುವುದು: “ಯೆಹೋವನ ಮಾತನ್ನು ಕೇಳಿರಿ; . . . ಭೂಲೋಕವನ್ನು ನಿರ್ಮಿಸಿ ರೂಪಿಸಿ ಸ್ಥಾಪಿಸಿದನು; ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು. ಈತನು ಹೀಗನ್ನುತ್ತಾನೆ—ನಾನೇ ಯೆಹೋವನು, ಇನ್ನು ಯಾವನೂ ಅಲ್ಲ.”

ಒಬ್ಬ ತಂದೆ ತಾಸುಗಟ್ಟಲೆ ಕೂತು ಒಂದು ಪುಟ್ಟ ಗಾಡಿಯನ್ನೊ ಗೊಂಬೆಯನ್ನೊ ಮಾಡಿ ತನ್ನ ಮಗುವಿಗೆ ಆಟವಾಡಲು ಕೊಡುತ್ತಾನೆಂದು ನೆನಸಿ. ಕೊಟ್ಟ ಕೆಲವೇ ನಿಮಿಷಗಳಲ್ಲಿ ಅದನ್ನು ಮಗುವಿನಿಂದ ಕಿತ್ತುಕೊಂಡು ತನ್ನ ಕೈಯಾರೆ ಹಾಳುಮಾಡಿದರೆ ಹೇಗಿರುತ್ತದೆ? ಅದು ಕ್ರೂರ ಕೃತ್ಯ ಅಲ್ಲವೆ. ಈಗ ನಮ್ಮ ವಿಷಯಕ್ಕೆ ಬರೋಣ. ಮಾನವರ ಸಂತೋಷಕ್ಕೆಂದೇ ದೇವರು ಈ ಭೂಮಿಯನ್ನು ಸೃಷ್ಟಿಸಿದನು. ಆತನು ಮೊದಲ ಮಾನವ ದಂಪತಿಗಳಾದ ಆದಾಮಹವ್ವರಿಗೆ “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ” ಎಂದು ಹರಸಿದನು. ಆಮೇಲೆ “ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು.” (ಆದಿಕಾಂಡ 1:27, 28, 31) ಭೂಮಿಯನ್ನು ಸೃಷ್ಟಿಸಿದ ಉದ್ದೇಶವನ್ನು ದೇವರು ಇಂದಿಗೂ ಮರೆತಿಲ್ಲ. ಅದನ್ನು ನಾಶವಾಗಲೂ ಬಿಡುವುದಿಲ್ಲ. ತನ್ನೆಲ್ಲ ಉದ್ದೇಶಗಳ ಬಗ್ಗೆ, ಕೊಟ್ಟಿರುವ ಮಾತಿನ ಬಗ್ಗೆ ಆತನು ಹೀಗನ್ನುತ್ತಾನೆ: “ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.”—ಯೆಶಾಯ 55:11.

“ಭೂಮಿಯನ್ನು ನಾಶಮಾಡುತ್ತಿರುವವರನ್ನು ನಾಶಗೊಳಿಸುವ” ಬಗ್ಗೆಯೂ ಯೆಹೋವನು ಮಾತುಕೊಟ್ಟಿದ್ದಾನೆ. (ಪ್ರಕಟನೆ 11:18) ತನ್ನ ವಾಕ್ಯವಾದ ಬೈಬಲಿನಲ್ಲಿ ಆತನು ಹೇಳುವುದು: “ಯಥಾರ್ಥವಂತರು [ಭೂಮಿಯಲ್ಲಿ] ವಾಸಿಸುವರು. ದೋಷರಹಿತರು ಅದರಲ್ಲಿ ನೆಲೆಯಾಗಿ ಇರುವರು. ದುಷ್ಟರಾದರೋ ಭೂಮಿಯಿಂದ ತೆಗೆದುಹಾಕಲ್ಪಡುವರು, ದ್ರೋಹಿಗಳು ಬೇರು ಸಹಿತವಾಗಿ ಅದರಿಂದ ಕೀಳಲ್ಪಡುವರು.”—ಜ್ಞಾನೋಕ್ತಿ 2:21, 22, ಪವಿತ್ರ ಗ್ರಂಥ ಭಾಷಾಂತರ.

ಈ ಮಾತುಗಳು ಯಾವಾಗ ಈಡೇರುತ್ತವೆ? “ಆ ದಿನದ ಅಥವಾ ಗಳಿಗೆಯ ವಿಷಯವಾಗಿ ತಂದೆಗೆ [ಯೆಹೋವನಿಗೆ] ಹೊರತು ಮತ್ತಾರಿಗೂ ತಿಳಿದಿಲ್ಲ; ಸ್ವರ್ಗದಲ್ಲಿರುವ ದೇವದೂತರಿಗಾಗಲಿ ಮಗನಿಗಾಗಲಿ ತಿಳಿದಿಲ್ಲ” ಎಂದನು ಯೇಸು. (ಮಾರ್ಕ 13:32) ಹೀಗಿರುವಾಗ ಮನುಷ್ಯರು ಹೇಗೆ ತಿಳಿದಾರು? ದುಷ್ಟರ ನಾಶನದ ತಾರೀಖನ್ನು ನಿಗದಿಪಡಿಸುವ ಕಾರ್ಯಕ್ಕೆ ಯೆಹೋವನ ಸಾಕ್ಷಿಗಳು ಕೈಹಾಕುವುದಿಲ್ಲ. ಆದರೆ ಆ ನಾಶನ ಹತ್ತಿರವಿದೆಯೆಂಬ “ಸೂಚನೆ”ಯನ್ನು ಗುರುತಿಸಿ ಮಾನವರು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದಾರೆಂಬ ಬೈಬಲಿನ ಮಾತನ್ನು ಅವರು ನಂಬುತ್ತಾರೆ. (ಮಾರ್ಕ 13:4-8, 33; 2 ತಿಮೊಥೆಯ 3:1) ನಾಶನ ಯಾವಾಗ ಬರುತ್ತದೆಂಬ ವಿಷಯ ದೇವರಿಗೂ ಆತನ ಮಗನಿಗೂ ಗೊತ್ತು ಎಂಬ ಖಾತ್ರಿ ಅವರಿಗಿದೆ.

ದುಷ್ಟತನದ ಅಂತ್ಯ ಬರುವ ವರೆಗೆ ಅವರು ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ತಲ್ಲೀನರಾಗಿರುತ್ತಾರೆ. ಸ್ವರ್ಗದಿಂದ ಆಳಲಿರುವ ದೇವರ ಆ ಸರ್ಕಾರ ಭೂಮಿಯನ್ನು ಶಾಂತಿ ನೆಮ್ಮದಿಯ ತಾಣವನ್ನಾಗಿ ಮಾರ್ಪಡಿಸುವುದು ಮತ್ತು ಭೂಮಿಯಲ್ಲಿ ‘ನೀತಿವಂತರು ಶಾಶ್ವತವಾಗಿ ವಾಸಿಸುವರು’ ಎಂದು ಪ್ರಕಟಿಸುತ್ತಾರೆ.—ಕೀರ್ತನೆ 37:29. (w11-E 12/01)

[ಪುಟ 10ರಲ್ಲಿರುವ ಚಿತ್ರ ಕೃಪೆ]

Image Science and Analysis Laboratory, NASA-Johnson Space Center