ದೇವರ ಸರ್ಕಾರ ಏನೆಲ್ಲಾ ಮಾಡುತ್ತೆ?
ಯೇಸು ತನ್ನ ಶಿಷ್ಯರಿಗೆ ದೇವರ ಸರ್ಕಾರಕ್ಕಾಗಿ ಪ್ರಾರ್ಥಿಸಲು ಕಲಿಸಿದ. ಯಾಕೆ? ಯಾಕಂದ್ರೆ ಭೂಮೀಲಿ ಕೆಟ್ಟ ವಿಷಯಗಳು ನಡೆಯಬೇಕು ಅನ್ನೋದು ದೇವರ ಇಷ್ಟ ಅಲ್ಲ ಅಂತ ಯೇಸುಗೆ ಚೆನ್ನಾಗಿ ಗೊತ್ತಿತ್ತು. ಅಷ್ಟೇ ಅಲ್ಲ, ಈ ಕೆಟ್ಟ ವಿಷಯಗಳನ್ನ ದೇವರ ಸರ್ಕಾರದಿಂದ ಮಾತ್ರ ತೆಗೆಯಲು ಸಾಧ್ಯ ಅಂತಾನೂ ಅವನಿಗೆ ಗೊತ್ತಿತ್ತು. ದೇವರ ಸರ್ಕಾರ ಏನೆಲ್ಲಾ ಮಾಡುತ್ತೆ?
ದೇವರ ಸರ್ಕಾರ ಮಾಡಿರೋ ಸಾಧನೆ
ಯೇಸು ಹೇಳಿದ ಘಟನೆಗಳ ಬಗ್ಗೆ ಹಿಂದಿನ ಲೇಖನದಲ್ಲಿ ನೋಡಿದ್ವಿ. ಆ ಘಟನೆಗಳು ನಮ್ಮ ಕಣ್ಮುಂದೆ ನಡಿತಾ ಇರೋದ್ರಿಂದ ಸ್ವರ್ಗದಲ್ಲಿ ದೇವರ ಸರ್ಕಾರ ಈಗಾಗಲೇ ಸ್ಥಾಪನೆ ಆಗಿದೆ, ಯೇಸು ಅದಕ್ಕೆ ನಾಯಕನಾಗಿದ್ದಾನೆ ಅಂತ ಗೊತ್ತಾಗುತ್ತೆ.
ಯೇಸು ನಾಯಕನಾಗಿ ಅಧಿಕಾರ ವಹಿಸಿದ ಕೂಡಲೇ ಸೈತಾನ ಮತ್ತು ಅವನ ದೆವ್ವಗಳನ್ನು ಸ್ವರ್ಗದಿಂದ ಹೊರಗೆ ಹಾಕುತ್ತಾನೆ ಅಂತ ಬೈಬಲ್ ಹೇಳುತ್ತೆ. ಅದು ಹೇಳಿದ ಹಾಗೇ ಆಯ್ತು. ಯೇಸು ಸ್ವರ್ಗದಿಂದ ಸೈತಾನನ್ನು ಭೂಮಿಗೆ ತಳ್ಳಿದ್ದಾನೆ. ಸೈತಾನ ತನ್ನ ಕೋಪನಾ ಭೂಮಿ ಮೇಲೆ ತೋರಿಸುತ್ತಿದ್ದಾನೆ. 1914 ರಿಂದ ಭೂಮಿ ಮೇಲೆ ಕಷ್ಟ ಸಮಸ್ಯೆಗಳು ಜಾಸ್ತಿ ಆಗೋದಕ್ಕೆ ಇದೇ ಮುಖ್ಯ ಕಾರಣ.—ಪ್ರಕಟನೆ 12:7, 9.
ಭೂಮೀಲಿ ಇಷ್ಟೆಲ್ಲಾ ಕಷ್ಟ ಸಮಸ್ಯೆಗಳು ಇದ್ದರೂ ದೇವರ ಸರ್ಕಾರದ ನಾಯಕನಾದ ಯೇಸು ಜನರಿಗೆ ಒಳ್ಳೇದು ಮಾಡುತ್ತಿದ್ದಾನೆ. ಹೇಗೆ? ಲೋಕದ ಎಲ್ಲಾ ಜನರಿಗೆ ದೇವರ ಬಗ್ಗೆ ತಿಳುಕೊಳ್ಳಲು, ಬೈಬಲಿನಲ್ಲಿರೋ ಸಲಹೆಗಳನ್ನ ಜೀವನದಲ್ಲಿ ಅನ್ವಯಿಸಿಕೊಳ್ಳಲು ಸಹಾಯ ಮಾಡುತ್ತಿದ್ದಾನೆ. (ಯೆಶಾಯ 2:2-4) ಇದರಿಂದ ಜನರಿಗೆ ಕುಟುಂಬದಲ್ಲಿ ಸಂತೋಷವಾಗಿ ಇರೋಕೆ, ಹಣ-ಐಶ್ವರ್ಯದ ಗುಲಾಮರು ಆಗದೇ ಇರೋಕೆ, ಉದ್ಯೋಗದ ಜೊತೆ ಬೇರೆ ವಿಷಯಗಳಿಗೂ ಪ್ರಾಮುಖ್ಯತೆ ಕೊಡೋಕೆ ಸಹಾಯ ಆಗಿದೆ. ಈ ವಿಷಯಗಳಿಂದ ಜನರಿಗೆ ಈಗ ಮಾತ್ರ ಅಲ್ಲ ಮುಂದೆ ದೇವರ ಸರ್ಕಾರದ ಪ್ರಜೆಗಳಾದ ಮೇಲೂ ಪ್ರಯೋಜನ ಆಗುತ್ತೆ.
ದೇವರ ಸರ್ಕಾರ ಮಾಡಲಿರುವ ಸಾಧನೆ
ಸ್ವರ್ಗದಲ್ಲಿ ಯೇಸುವಿನ ಆಳ್ವಿಕೆ ಆರಂಭ ಆಗಿದ್ರೂ ಭೂಮಿಯಲ್ಲಿ ಇನ್ನೂ ಮಾನವ ಸರ್ಕಾರದ ಆಳ್ವಿಕೆನೇ ಇದೆ. ದೇವರು ಯೇಸುಗೆ, “ನಿನ್ನ ವೈರಿಗಳ ಮಧ್ಯದಲ್ಲಿ ದೊರೆತನಮಾಡು” ಅಂತ ಹೇಳಿದ್ದಾನೆ. (ಕೀರ್ತನೆ 110:2) ಹಾಗಾಗಿ ಯೇಸು ಬಲುಬೇಗ ಕೆಟ್ಟವರನ್ನೆಲ್ಲ ನಾಶಮಾಡಿ ದೇವರ ಹೇಳಿದ ಹಾಗೆ ಕೇಳೋ ಎಲ್ಲಾ ಜನರಿಗೆ ಒಂದು ಒಳ್ಳೇ ಪರಿಸ್ಥಿತಿ ತರಲಿದ್ದಾನೆ.
ಬಲುಬೇಗನೆ ದೇವರ ಸರ್ಕಾರ ಏನು ಮಾಡುತ್ತೆ?
-
ಸುಳ್ಳು ಧರ್ಮಗಳನ್ನು ನಾಶ ಮಾಡುತ್ತೆ. ನೂರಾರು ವರ್ಷಗಳಿಂದ ದೇವರ ಬಗ್ಗೆ ಸುಳ್ಳು ಕಲಿಸಿ ಜನರ ದಾರಿ ತಪ್ಪಿಸುತ್ತಿರೋ, ಅವರ ಮೇಲೆ ದಬ್ಬಾಳಿಕೆ ನಡೆಸುತ್ತಿರೋ ಧರ್ಮಗಳು ಇನ್ನು ಮುಂದೆ ಇರಲ್ಲ. ಬೈಬಲ್ ಸುಳ್ಳು ಧರ್ಮನಾ ಒಬ್ಬ ವೇಶ್ಯೆಗೆ ಹೋಲಿಸುತ್ತೆ. ಇದರ ನಾಶನದ ಬಗ್ಗೆ ಕೇಳಿದ ಜನರಿಗೆ ಸಿಡಿಲು ಬಡಿದಂಗೆ ಆಗುತ್ತೆ.—ಪ್ರಕಟನೆ 17:15, 16.
-
ಮಾನವ ಸರ್ಕಾರಗಳನ್ನು ನಾಶ ಮಾಡುತ್ತೆ. ದೇವರ ಸರ್ಕಾರ ಮಾನವ ಆಳ್ವಿಕೆಗೆ ಕೊನೆ ತರುತ್ತೆ.—ಪ್ರಕಟನೆ 19:15, 17, 18.
-
ಕೆಟ್ಟ ಜನರನ್ನು ನಾಶ ಮಾಡುತ್ತೆ. “ದ್ರೋಹಿಗಳು ನಿರ್ಮೂಲರಾಗುವರು” ಅಂದ್ರೆ ದೇವರ ಮಾತನ್ನು ಕೇಳದೆ ಮೊಂಡು ಬಿದ್ದಿರುವ ಕೆಟ್ಟತನ ತೋರಿಸೋ ಜನರು ನಾಶ ಆಗುತ್ತಾರೆ ಅಂತ ಬೈಬಲ್ ಹೇಳುತ್ತೆ.—ಜ್ಞಾನೋಕ್ತಿ 2:22.
-
ಸೈತಾನ ಮತ್ತವನ ಕೆಟ್ಟ ದೂತರನ್ನು ನಾಶ ಮಾಡುತ್ತೆ. ಸೈತಾನ ಮತ್ತು ದೆವ್ವಗಳು ಇನ್ನೆಂದೂ ಜನರಿಗೆ ಮೋಸ ಮಾಡಲ್ಲ.—ಪ್ರಕಟನೆ 20:3, 10.
ದೇವರ ಸರ್ಕಾರ ಬೆಂಬಲಿಸೋ ಜನರಿಗೆ ಯಾವೆಲ್ಲಾ ಆಶೀರ್ವಾದಗಳು ಸಿಗುತ್ತೆ?
ದೇವರ ಸರ್ಕಾರದಿಂದ ಮಾನವರಿಗೆ ಯಾವೆಲ್ಲಾ ಆಶೀರ್ವಾದಗಳು ಸಿಗುತ್ತೆ?
ಮಾನವರ ಕೈಯಲ್ಲಿ ಮಾಡಲು ಆಗದ ಎಲ್ಲಾ ವಿಷಯಗಳನ್ನು ಯೇಸು ನಾಯಕನಾಗಿ ಮಾಡುತ್ತಾನೆ. ಭೂಮಿಯಿಂದ ಆರಿಸಿಕೊಳ್ಳಲಾದ 1,44,000 ಮಂದಿ ಅವನಿಗೆ ಸಹಾಯ ಮಾಡುತ್ತಾರೆ. (ಪ್ರಕಟನೆ 5:9, 10; 14:1, 3) ಭೂಮಿ ಮೊದಲಿನ ತರ ಆಗಬೇಕು ಅನ್ನೋ ದೇವರ ಇಷ್ಟನಾ ಯೇಸು ಈಡೇರಿಸುತ್ತಾನೆ. ದೇವರ ಸರ್ಕಾರ ಮಾನವರಿಗಾಗಿ ಏನು ಮಾಡುತ್ತೆ ಅಂತ ಬೈಬಲಲ್ಲಿ ಇರೋ ವಿವರಗಳನ್ನು ಕೆಳಗೆ ಕೊಡಲಾಗಿದೆ:
-
ಕಾಯಿಲೆ ಮತ್ತು ಮರಣನಾ ತೆಗೆದುಹಾಕುತ್ತೆ. “[ಭೂಮಿಯ] ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು,” “ಇನ್ನು ಮರಣವಿರುವದಿಲ್ಲ.”—ಯೆಶಾಯ 33:24; ಪ್ರಕಟನೆ 21:4.
-
ಶಾಂತಿ ಭದ್ರತೆ ತರುತ್ತೆ. “ನಿನ್ನ ಮಕ್ಕಳ ಸಮಾಧಾನವು ಅಧಿಕವಾಗಿರುವುದು” ಮತ್ತು “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು.”—ಯೆಶಾಯ 54:13, ಪವಿತ್ರ ಬೈಬಲ್; ಮೀಕ 4:4.
-
ಎಲ್ಲರಿಗೂ ಒಳ್ಳೇ ಕೆಲಸ ಕೊಡುತ್ತೆ. “ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು. ಅವರು ವ್ಯರ್ಥವಾಗಿ ದುಡಿಯರು.”—ಯೆಶಾಯ 65:22, 23.
-
ಭೂಮಿಯ ಪರಿಸರ ಸ್ವಚ್ಛವಾಗಿರುವಂತೆ ಮಾಡುತ್ತೆ. “ಅರಣ್ಯವೂ ಮರುಭೂಮಿಯೂ ಆನಂದಿಸುವವು; ಒಣನೆಲವು ಹರ್ಷಿಸಿ ತಾವರೆಯಂತೆ ಕಳಕಳಿಸುವದು.”—ಯೆಶಾಯ 35:1.
-
ಶಾಶ್ವತವಾಗಿ ಜೀವಿಸಲು ಬೇಕಾದ ಶಿಕ್ಷಣ ಕೊಡುತ್ತೆ. “ಒಬ್ಬನೇ ಸತ್ಯ ದೇವರಾಗಿರುವ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವುದೇ ನಿತ್ಯಜೀವವಾಗಿದೆ.”—ಯೋಹಾನ 17:3.
ನೀವು ಈ ಆಶೀರ್ವಾದಗಳನ್ನು ಪಡೆಯಬೇಕು ಅಂತ ದೇವರು ಬಯಸುತ್ತಾನೆ. (ಯೆಶಾಯ 48:18) ಈ ಆಶೀರ್ವಾದಗಳನ್ನು ಪಡೆಯಲು ಈಗ ನೀವೇನು ಮಾಡಬೇಕು ಅನ್ನೋದಕ್ಕೆ ಮುಂದಿನ ಲೇಖನದಲ್ಲಿ ಉತ್ತರ ಇದೆ.